ಅರ್ರೆರೇ..! ನೀನಾ, ಮೀನ ?
ಅದೇನು ಬಂದ್ದು ಈ ದಿನ ?
ಕ್ಷೇಮವೆ, ಸೌಖ್ಯವೆ ?
ಮತ್ತೇನೋ ಹೇಳುವಂತಿದೆ !
ಮದುವೆಯಾಗ ಬೇಕೆ, ನಿನ್ನ ಮದುಮಗನು ನಾನಾಗಿ ಬದುಕಿ ಬಾಳ ಬೇಕೆ ಕೈಹಿಡಿದು ಜೊತೆಜೊತೆಯಾಗಿ ಕನಸ್ಸಿನ ಗುಡಿ - ಗೋಪುರಗಳ ನೀನೇಕೆ ಕಟ್ಟುವೆ
ಬಿದ್ದು ಚೂರು ಚೂರಾದೀತು ಗೋಪುರವು ಜೋಕೆ ॥
ಮಸಣದಾ ಮಲ್ಲಿಗೆಯ ಮುಡಿವರುಂಟೆ
ಬಡತನದ ಬಾಲೆಯ ಕೈಹಿಡಿವರುಂಟೆ
ಗುಣವಿದ್ದರೆ ಸಾಕೆ, ರೂಪವಿದ್ದರೆ ಸಾಕೆ
ಹಣವಿರಬೇಕು, ಕೈತುಂಬ ಈ ಕಾಲಕೆ ॥
ಹೋಗು ಹೋಗೆಲೇ ಹುಡುಗಿ ನೀ ತಿರುಗಿ
ಬರಬೇಡ ಹಿಂದೆ, ಸಿಡಿಲು - ಗುಡುಗಾಗಿ
ಸುಖ ಕಂಡಾಯ್ತು, ಹಣ ನೀಡಾಯ್ತು
ನನ್ನಾ ನಿನ್ನಾ ಕೊಂಡಿ ಕಳೆಚಾಯ್ತು ॥
ಬೇಕಿದ್ದರೆ ನೀ ಕೇಳು ಸಾಕಷ್ಟು ಕೊಡುವೆ ಹಣವ ಹೆಗಲಿಗೇರಿಸ ಬೇಡ ಮತ್ತೊಮ್ಮೆ ನಿನ್ನ ಋಣವ
ನೂರರ ಎರಡು ನೋಟು ಸಾಕೆ, ಮತ್ತಷ್ಟು ಬೇಕೆ
ಏನೂ...... ನನ್ನ ಸನಿಹ ಒಂದಿದ್ದರೆ ನಿನಗೆ ಸಾಕೆ ॥
ಎನಗೆ ನೀ ಚರಣದಾಸಿಯಾಗಲೂ ಬೇಡ
ಎನ್ನ ಮನೆಯ ಜ್ಯೋತಿಯಾಗಲೂ ಬೇಡ
ನೀ ಯಾರೋ ನಾ ಯಾರೋ ಹೋಗಲೇ ಮರುಳೆ
ಭುವಿ ಎತ್ತ, ಬಾನೆತ್ತ ಹೋಗು ಹೋಗಲೇ ಇರುಳೆ ॥
ಏನೂ.. ಭುವಿಗೆ - ಬಾನಿಗೆ ಬೆಸುಗೆಯೇ ಕತ್ತಲು
ಇರುವ ಹೊತ್ತಾದರೂ ಎಷ್ಟು, ಆ ಕರಾಳ ಕತ್ತಲು ಕತ್ತಲದೂಡಿ ಬಾರದಿರುವುದೇ ಆ ಹೊಂಬಿಸಿಲು ಸಿರಿತನವೇ ಹೊಂಬಿಸಿಲು, ಬಡತನವೇ ಕತ್ತಲು ॥
ತರುವೆಯೇನು ಬಯಸಿದಷ್ಟು ಹಣವ
ಕೈಹಿಡಿದು ಜೊತೆಯಾಗಿ ಅಪ್ಪಿ ನಡೆವ
ನೀನೋ ಬಡತನದಿ ಬೆಂದು ಬೆಳೆದ ಬಾಲೆ
ನನಗೂ ನನ್ನವರಿಗೆ ಮೋಹ ಹಣದ ಮೇಲೆ ॥
ಹಣದ ಮಹಿಮೆಯ ನೀನೇನು ಬಲ್ಲೆ
ದಿನದ ಒಡನಾಡಿ ಈ ಹಣವು ಗೊತ್ತೆ
ಹಣವಿಲ್ಲದವನ ಬಾಳು ಹೆಣಕ್ಕಿಂತ ಕೀಳು
ಇರುವಾಗ ಹಣವು ಬಾಳೆಲ್ಲಾ ಹಾಲ್ಜೇನು ॥
ಮಳೆಕಾಣದ ಭುವಿಗೆ ಮಳೆ ತಣಿಸಿದ್ದು ತಪ್ಪೆ
ಚಳಿಗಾಲದ ಮೈಗೆ ಬಿಸಿಯ ನೀಡಿದ್ದು ತಪ್ಪೆ
ಬೀಜ ಬಿತ್ತಾಯ್ತು, ಎನಗೆ ನಿನಗೆ ಮೋಜಾಯ್ತು
ಬಿಟ್ಟ ಫಲವೆಲ್ಲ ನಿನ್ನ ಬಾಳ ಪಥದ ಸೊತ್ತಾಯ್ತು ॥
ಅಯ್ಯೋ..! ಶತಮೂರ್ಖ ಓ ನನ್ನ ಗಂಡಸೇ
ಕಾಲ ಬದಲಾಗಿದೆ, ಭಂಡ ಧೈರ್ಯವ ಬಿಡು
ಬಾಳುವ ಭಾಗ್ಯವ, ತಾಳಿಯ ಭಾಗ್ಯವ ನೀಡು
ಬೀದಿ ಪಾಲಾದೀತು ಮಾನ ಎಚ್ಚರ, ಟೀವಿ ಎದರು ॥