ಚೈತ್ರದ ಭಾವ ಚಿಗುರೆಲೆಯು
ಧಮನಿ ಧಮನಿಗಳಲ್ಲಿ ಹರಿಯುವ
ನಿನ್ನ ಪ್ರೀತಿ ಹೂನಗೆಯ ರಾಗಕೆ
ಹೊತ್ತು ತಂದ ಸುಮ ಸೌರಭದ
ಘಮ ಘಮದ ಗಂಧ ಗಾಳಿಗೆ
ಹೊಂಗೆ ಹೂವ ಗೊಂಚಲುಗಳಲ್ಲಿ
ಭೃಂಗದ ಸಂಗೀತ ಕಾಮಕೇಳಿ
ಹರಿವ ನೀರ ತೊರೆಗಳಲ್ಲಿ
ಜುಳು ಜುಳು ನಾದ ತೇಲಿ
ಮತ್ತೆ ಮತ್ತೆ ಯುಗಾದಿ ಬಂದಿದೆ
ಹರೆಯ ಮತ್ತೆ ಎನಗೆ ತಂದಿದೆ
ಕರೆದಾಗಲೆಲ್ಲಾ ಕರುಣೆ ತೋರಿ
ಓಡೋಡಿ ಬರುತ್ತಿದ್ದವಳು,
ಉಸಿರಿಗೆ ಉಸಿರಾಗಿ ಬೆರೆತು
ಜೊತೆಯಾಗಿ ನಿಂತವಳು
ನನ್ನ ತೊರೆದು ಎಲ್ಲಿ ಹೋದಳೋ....
ನಲ್ಲೇ...ನೀ ನನ್ನ ಮದುವೆಯಾಗಿ
ಮನೆ ತುಂಬಿ, ಮೈದುಂಬಿ ಬಂದ ಮೇಲೆ
ಅವಳು ಈ ಹೃದಯದೊಳು ಏಕೋ ಇಲ್ಲ
ಎತ್ತ ಹೋದಳೋ..... ಒಂದೂ ಗೊತ್ತಿಲ್ಲ
ಇಲ್ಲೇ ಎಲ್ಲೋ... ಹೋಗಿ ಬರುವೆ ಎಂದವಳ
ಸುಳಿವಂತೂ ಎನಗೆ ತಿಳಿದೇ... ಇಲ್ಲ
ನಿನ್ನೊಲವ ಸುಖದ ಸುಳಿಗೆ ಸಿಲುಕಿ
ನಾನವಳ ಮರೆತು ಹೋದೆನೇನೋ.... ?
ಸುಳಿವ ತಂಗಾಳಿಯ ತಂಬೆಲರಂತೆ
ಮಿಡಿವ ಮನಕೆ ಇಂಪಾದ ಹಾಡಂತೆ
ನನ್ನ ಸಂತೈಸಿ, ಅಪ್ಪಿ ಮುದ್ದಾಡುತ್ತಿದ್ದವಳು
ಹಗಲಿರುಳೆನ್ನದೆ, ಮಳೆಗಾಳಿಯೆನ್ನದೆ
ಬೆಚ್ಚನೆಯ ಈ ಮೈ ಮನಕೆ
ತಂಪು ಹೊದಿಕೆಯ ಹೊದಿಸಿ
ನಿದಿರೆಗೆ ಮದಿರೆಯಾಗಿದ್ದಳು
ಸುತ್ತಾಡದ ಜಗವಿರಲಿಲ್ಲ
ಅಡ್ಡಾಡದ ದಿನವಿರಲಿಲ್ಲ
ಕನಸ್ಸುಗಳಲ್ಲೇ... ನನ್ನ ತೇಲಿಸಿ
ಬಾಳ ಬಾನಂಗಳದಿ ಚಂದ್ರಿಕೆಯಾಗಿದ್ದಳು
ನಮ್ಮಲ್ಲಿರಲಿಲ್ಲ ವಿರಸದ ಜನನ
ಪ್ರತಿಕ್ಷಣವೂ ರಸಮಯ ತನನ
ಮುನಿಸು ತೊರೆದ ಬೆಳ್ಮುಗಿಲಾಗಿದ್ದಳು
ಕನಸುಗಳ ಬಿತ್ತಿ ಕಣ್ಮಣಿಯಾಗಿದ್ದವಳು
ನಾ ನಿಟ್ಟುಸಿರಿಟ್ಟರೂ ಎದ್ದೋಡಿ ಬರುತ್ತಿದ್ದಳು
ಕಂಗಾಲಾದರೂ ಮಿಡುಕಾಡಿ ಒದ್ದಾಡುತ್ತಿದ್ದಳು
ನೀ ನನ್ನ ಕೈಹಿಡಿದ ಮೇಲೆ
ನಿನ್ನ ಯೌವನದ ಕಿಚ್ಚು ಹೊಳೆಯೊಳಗೆ
ಕೊಚ್ಚಿ ಹೋದ ಮೇಲೆ ಕಾಣೆಯಾದಳು
ನಿದ್ದೆಯಲ್ಲಿ ನಾ ಬಡ ಬಡಿಸುವಾಗ
ನೀ ಅನುಮಾನಗೊಂಡು ನನ್ನೇ ಪ್ರಶ್ನಿಸಿದ್ದೆ
ನಲ್ಲೇ... ನೀ ಬರುವ ಮುಂಚೆಯೇ....
ಅವಳೆದೆಯಲ್ಲಿ ನಾ ನಿಶ್ಚಿಂತೆಯಾಗಿದ್ದೆ
ಅಯ್ಯೋ...! ಅರಿವಿಲ್ಲದಾ ಮಂಕೇ...
ನಿನಗೇಕೆ ಅವಳ ಮೇಲಯೇ ಶಂಕೆ
ನಿನಗೆ ಸವತಿಯೂ ಅವಳಲ್ಲ
ಪ್ರತಿ ರಾತ್ರಿಗೆ ಪ್ರತಿಸ್ಪರ್ಧಿಯಲ್ಲ
ನನ್ನೊಳಗಿನ ಕಲ್ಪನೆಗಳ " ಕಾವ್ಯ ಕನ್ನಿಕೆ "
ಮೊದಲು ಸುರಿದ ಮಳೆಗೇ...
ಮಿಂದೆದ್ದ ಆ ಭುವಿಯಂತೆ,
ಆ ನಿನ್ನಾ ಕಣ್ಣೋಟದ ಸೆಳತಕೆ
ಕರಗಿ ಸೋತ ಈ ಮನಸ್ಸು;
ನಾ ಕಂಡೆ ನೂರಾರು ಕನಸು
ನೀ ಏನೇ ಹೇಳೂ.... ನನಗೇ
ನನ್ನೊಳಗೊಗೆ ಪ್ರತಿ ಮಿಡಿವ
ಎದೆ ಬಡಿತದ, ಲಯ ತಪ್ಪಿದ
ಮಧುರ ಮೈತ್ರಿಯ ಆಕರ್ಷಣೆ
ಏಕೋ ಮೌನದ ಸಂಭಾಷಣೆ
ಆ ನಿನ್ನಾ ಸವಿನೆನಪುಗಳು
ಉಲ್ಲಾಸದ ಉಯ್ಯಾಲೆಯು
ನನ್ನನ್ನೇ ತಬ್ಬಿ ತೂಗಿರಲು
ಕಡಲ ಅಲೆಯು ಮುತ್ತಿಕ್ಕುವ ಹಾಗೆ
ನೀರ ನೊರೆ ಹಾಲಿನ ಕಚಗುಳಿಗೆ
ನಾ ಹೇಗೆ ಸಹಿಸಲಿ ನೀ ಹೇಳು
ನಿಂತಲ್ಲಿಯೇ ನಾ ಕರಗಿ ಹೋದೆ
ನಿಂತಲ್ಲಿಯೇ ನಾ ಕರಗಿ ಹೋದೆ....
ನಾ ಯೋಚಿಸಿ ಯೋಚಿಸಿ ಸಾಕಾಗಿ
ಆಲೋಚನೆಗಳಲ್ಲಿ ಮುಳುಗಿದರೂ....
ದಿನವಿಡೀ ತೂಕಡಿಸಿ ಕೂತರೂ...
ಹತ್ತಿರ ಸುಳಿಯದು, ನೆನಪಿಗೆ ನಿಲುಕದು
ಒಮ್ಮೊಮ್ಮೆ ಏನೂ... ಹೊಳೆಯುವುದೇ ಇಲ್ಲ;
ಪುಟಗಟ್ಟಲೆ ಬರೆಯಬೇಕೆಂಬ ಹಂಬಲಕೆ
ನಾ ಬಿಡಬೇಕಷ್ಟೇ... ನಿಟ್ಟುಸಿರಿನ ಎಳ್ಳು- ನೀರು
ರಾತ್ರಿಯಿಡೀ ನಿದ್ದೆಯಿಲ್ಲದೆ ಅಡ್ಡಾದಿಡ್ಡಿ ಒದ್ದಾಡಿದರೂ...
ಆ ಅಗಾಧವಾದ ಆಳಕ್ಕೆ ಹೊಕ್ಕಂತೆಲ್ಲಾ....
ಅಂಧಕಾರದ ಆರ್ಭಟವೇ .... ಹೆಚ್ಚು
ಮುಗ್ಗರಸಿ ಬಿದ್ದೀನೆಂಬ ಭಯವಿಲ್ಲ,
ಪುಂಖಾನುಪುಂಖವಾಗಿ ಒಮ್ಮಿಂದೊಮ್ಮೆಲೇ
ಮನ ಮಂಥನದಿ ಮಂಥಿಸಿದಷ್ಟೂ....
ಕಾರ್ಕೋಟಕ ಹಾಲಾಹಲ, ಕೋಲಾಹಲದ ಜೊತೆ ಕಾವ್ಯಾಮೃತದ ಉದ್ಭವ ...
ವಿಶ್ವ ಕವನ ದಿನಕ್ಕಾಗಿ ಬರೆದದ್ದು ( World Poetry Day )
ಮೊದಲ ಮಳೆಗೇ....
ಮಿಂದ ಆ ಭುವಿಯಂತೆ,
ಆ ನಿನ್ನ ಕಣ್ಣ ನೋಟಕೆ
ಕರಗಿ ಸೋತ ಈ ಮನಸ್ಸು;
ಕಂಡೆ ನೂರಾರು ಕನಸು
ನೀ ಏನೆ ಹೇಳೂ... ನನಗೆ
ನನ್ನೊಳಗೊಗೆ ಮಿಡಿವ
ಆ ನಿನ್ನಾ ಸವಿನೆನಪುಗಳ
ಉತ್ಸಾಹದ ಉಯ್ಯಾಲೆಯು
ನನ್ನನ್ನೇ ತಬ್ಬಿ ತೂಗಿರಲು
ಕಡಲ ಅಲೆಯು ಮುತ್ತಿಕ್ಕುವ ಹಾಗೆ
ನೊರೆ ಹಾಲಿನ ಕಚಗುಳಿಯ ಬೇಗೆ
ನಿಂತಲ್ಲೇ ನಾ ಕರಗಿ ಹೋದೆ.... !