Showing posts with label ಚಿತ್ರ ಕೃಪೆ: ಅಂತರ್ಜಾಲ. Show all posts
Showing posts with label ಚಿತ್ರ ಕೃಪೆ: ಅಂತರ್ಜಾಲ. Show all posts

Wednesday, August 13, 2014

" ಸ್ಮೈಲ್ ಪ್ಲೀಸ್ ".... !!

ಫೋಟೊ ತೆಗೆಯುವವ
ಸ್ಮೈಲ್ ಪ್ಲೀಸ್ ಸರ್ ಅಂದ
ನನ್ನವಳ ಮುಖ ನೋಡಿ,
ನಾ ಗಂಭೀರವದನನಾದೆ !
ಅಪ್ಪಿತಪ್ಪಿ ನಾ ಅವಳ ಮುಂದೆ
ಬಾಯ್ತೆರೆಯುವಂತಿದೆಯೇ....
ತಮಾಷೆಗಾದರೂ.... ಸರಿಯೆ
ಎಲ್ಲರೆದೆರು ನಾ ನಗುವಂತಿಲ್ಲ;
ಮನೆಗೆ ಹೋದರೆ
ನನ್ನ ಸುಮ್ಮನೆ ಬಿಡುವಳೇ...
ಜನ್ಮ ಜಾಲಾಡಿಸಿ,
ಇದ್ದ ಬದ್ದ ಅವಳ ಸಿಟ್ಟೆನ್ನೆಲ್ಲಾ ಬೀರಿ 
ನನ್ನ ಮುವತ್ತೆರಡು ಹಲ್ಲುಗಳಿಗೂ
ಸಹಸ್ರನಾಮ ಮಾಡದಿರಳು...

Thursday, March 20, 2014

ಶ್ರೀದೇವಿ, ವಾಗ್ಧೇವಿ, ಜಯಗೌರಿ

ನಿನಗೆ ಕರ ಮುಗಿವೆ ತಾಯೇ..... ಕರವೀರಪುರವಾಸಿನಿಯೇ.......
ಮನೆ ಮುಂಬಾಗಿಲಿಗೆ ಬಂದು
ಕದ ತಟ್ಟಿ, ಅತ್ತಿತ್ತ ನೋಡುತ
ನೀ ಒಳ ಬರದೆ ಯೋಚಿಸುತ
ಅಲ್ಲಿಯೇ ನಿಂತೆಯೇಕೆ ತಾಯೇ....
ಮನಮಂದಿರದಿ ಮಲ್ಲಿಗೆಯ ಮಂಟಪವಿರಿಸಿ
ಅದರೊಳು ನಿನ್ನನ್ನು ಕುಳ್ಳರಿಸಿ, ನಾ ಪೂಜಿಸಿ
ಅರ್ಚಿಸುವೆ ಬಾ ಬೇಗನೇ ನೀ ಬಾರೆ ತಾಯೇ...
ಮದ ಮತ್ಸರವ ತೊಲಗಿಸಿ
ಅಂಧಕಾರವನು ನೀ ಅಳಿಸಿ
ಜ್ಞಾನ ಜ್ಯೋತಿಯ ಬೆಳಗಿಸಿ
ಸಿರಿ ಸಂಪದವ ನೀ ನೀಡು ಬಾ ತಾಯೇ...
ಶ್ರೀದೇವಿ, ವಾಗ್ಧೇವಿ, ಜಯಗೌರಿಯರೆಲ್ಲರೂ
ನಮ್ಮನು ಹರಸಲು ಬಾಳು ಬಂಗಾರ ತಾನೇ ...

Sunday, January 19, 2014

ನನ್ನವಳು - ೨

ನನ್ನವಳು ನನ್ನೆದೆಯಾ
ಬಾಳಂಗಳವ ಬೆಳಗೋ
ಹುಣ್ಣಿಮೆಯ ಮೊಗದವಳು
ಬಿರಿದ ಕೆಂದಾವರೆಯ,
ಜಿನುಗೊ ಜೇನ್ದುಟಿ
ಹೊಳೆಹೊಳೆವ ಕಣ್ಣವಳು
ಬಳುಕುವಾ ಎಳೆ ಬಳ್ಳಿಯಾ
ಸುಮ ಹೊತ್ತು ಬರುವ
ತಂಗಾಳಿಯ ಮೈಯವಳು !

ಎಂದಾದರು ಒಮ್ಮೊಮ್ಮೆ
ನಾನವಳ ರೇಗಿಸಲು
ಹುಸಿ ಮುನಿಸು ಬೀರುತ
ಮುನಿದು ಮಲಗಿದವಳ
ರಮಿಸಿ,ಒಲಿಸಿ ಕೊಳ್ಳುವುದು
ಹೇಗೆಂಬುದ ನಾನು ಬಲ್ಲೆ;
ಮುಂಗುರುಳ ನೆವರಿಸಿ
ಮುನಿದವಳ ಹಣೆಗೊಂದು
ಸಿಹಿ ಹೂ ಮುತ್ತನಿತ್ತರೆ
ಕೊರಳ ತಬ್ಬಿಡಿದು
ನನ್ನೆದೆಗೆ ಮೆಲ್ಲನೆ ಗುದ್ದಿ
ಕಣ್ಣರಳಿಸಿ ನಗು ನಗುತ
ನನ್ನೊಳು ಒಂದಾಗುವಳೂ !

Monday, January 6, 2014

" ಆಹಾ ನನ್ನ ಮದುವೆ "

ನನಗೇನೋ
ನಿಮ್ಮ ಮಗಳು ಒಪ್ಪಿಗೆ,
ವರದಕ್ಷಿಣೆ, ವರೋಪಚಾರ
ಆಡಂಬರ ನನಗೊಂದು ಬೇಡ
ಸಿಂಪಲ್ಲಾಗಿ ಗುರು ಹಿರಿಯರ ಸಮ್ಮುಖದಲ್ಲಿ
ಮದುವೆಯ ಮಾಡಿಕೊಟ್ಟರೆ ಸಾಕು;
ನನ್ನ ಬಗ್ಗೆ ಅನುಮಾನ ಬೇಡವೇ ಬೇಡ ನಿಮಗೆ
ವರದಕ್ಷಿಣೆ, ವರೋಪಚಾರ ಕೇಳದ
ವರ ಈ ಜಗದೊಳಗೆ ಉಂಟೇ ಎಂದು
ನನಗ್ಯಾವ ರೋಗ- ರುಜಿನವೂ ಇಲ್ಲ,
ಯಾವುದೇ ಮರೆಮಾಚುವ ಐಬೂ ಇಲ್ಲ
ಹೆಂಡತಿಯ ದುಡಿದು ಸಾಕಲಾರದವ
ಸ್ವಂತಿಕೆಯ ವ್ಯಕ್ತಿತ್ವ ಇಲ್ಲದವ
ಇದೆಲ್ಲವ ಕೇಳುವುದು, ಬೇಡುವುದು
ಸ್ವಂತ ಮನೆ, ಸಾಕಷ್ಟೂ ಆಸ್ತಿ ಪಾಸ್ತಿ;
ಕೈ ತುಂಬಾ ಸಂಪಾದನೆ ಇರುವಾಗ
ಬೇರೆಯವರಲ್ಲಿ ನಾ ಕೇಳಿ ಬಾಳಬೇಕೆ ?

Saturday, January 4, 2014

" ಬೆಳದಿಂಗಳ ಬಾಲೆ "

ನಾ ಹೇಗೆ ಹೇಳಲಿ ನಿಮಗೆ
ನನ್ನೊಳಗಿನ ತೊಳಲಾಟ
ನನಗೆ ಹೇಳದೇ ಬೇರೆ ವಿದಿಯಿಲ್ಲ
ಆಗುವುದೋ ಏನೋ ಹೇಳಿದರೆ
ಕೊಂಚ ಈ ಮನಸ್ಸಿಗೂ ನಿರಾಳ
ಅವಳು ಯಾರೋ ಏನೋ ಗೊತ್ತಿಲ್ಲ
ಫೋನಿನಲೆ ಮಧುರ ಕಂಠದಿ ಮಾತಾಡಿ
ಹಚ್ಚಿಹಳು ಅವಳೊಲವಿನ ಪ್ರೀತಿ ಹಣತೆ;
ಇಲ್ಲೆ ಎಲ್ಲೋ ಮರೆಯಲ್ಲಿ ನಿಂತು
ನನ್ನ ಎಲ್ಲ ಆಗು ಹೋಗುಗಳ ತಿಳಿದು
ಕರೆಯ ಮಾಡಿ ಬಿಡದೆ ಕಾಡುವಳಲ್ಲ
ಬಂದು ಎದಿರು ನೀ ನಿಲ್ಲೆನ್ನಲು
ಬುದ್ಧಿವಂತರು ನೀವೇ ಹುಡುಕಿ ಎನ್ನುವಳು
ಬೇಡ ಬೇಡವೆಂದರೂ ಅವಳ ದ್ವನಿಯೇ
ಮಾರ್ಧನಿಸಿ ಕಿವಿಯೊಳಗೆ,
ಕಾಡುವುದು ಪ್ರತಿರಾತ್ರಿ ಬಹಳ ಬಹಳ !

Friday, January 3, 2014

ನನ್ನವಳು - ೧

ನನ್ನವಳ ಮುಂಗುರುಳ ಕಂಡು
ಕರಿ ಮುಗಿಲಿಗೂ ತುಸು ಮುನಿಸು
ಹೆರಳ ತಾ ಹರಡಿ ನಿಂತರೆ,
ಗಿರಿಯ ನವಿಲಿಗೂ ಕುಣಿವ ಮನಸು
ಮುಡಿಗೇರೋ ಆ ಮಲ್ಲಿಗೆಗೂ
ಮನದಣಿಯೆ ಮಲಗೋ ಕನಸು
ಕೊರಳ ಕೊಂಕಿಸಿ ಕರೆವ ಕೂಗಿಗೆ
ಕೋಗಿಲೆಯೂ ತಾ ತಬ್ಬಿಬ್ಬು;
ನಡೆದು ಬರುವಾಗ ಬಳುಕಿ ಅವಳ
ನೀಳ ಜಡೆಯ ಸಿರಿ ಸೊಬಗ ಕಂಡು
ಹಾವು ಕೂಡ ತಾ ಹೆದರಿ ಓಡುವುದು
ನನ್ನೆದೆಯಾ ಅಂಗಳದಿ ನೆನಪುಗಳ
ತಂಗಾಳಿಯ ಸುಮವ ಹೊತ್ತು ತಂದಿಹಳು !

Saturday, September 28, 2013

ಅವರೇನೂ ಮಾಡ್ಲಿಲ್ಲ !!!

ಹೌದೇನೇ ಸುಗುಣಾ...,
ನಾ ಕೇಳಿದ್ದು ನಿಜವೆ
ಅಳಿಯಂದಿರು ಇತ್ತೀಚೆಗೆ
ಏನೋ ಯಡವಟ್ಟು
ಮಾಡಿ ಕೊಂಡರಂತೆ
ಆ ಕೆಲಸದವಳ ಜೊತೆಗೆ;
ನಾ ಮೊದಲೇ ಬಡ್ಕೊಂಡೆ
ಆ ನಿನ್ನ ಗಂಡನ ಮೇಲೆ
ಸದಾ ಒಂದು ಕಣ್ಣಿಟ್ಟಿರು,
ಜಡೆಯ ಕಂಡರೆ ಸಾಕು
ಈ ಗಂಡಸರ ಕೈಕಾಲು
ನೆಲದ ಮೇಲೆ ನಿಲ್ಲಲ್ಲ
ಆಕಾಶದಲ್ಲಿ ಹಾರಾಡುತ್ತೆ;
ಈಗ ಅನುಭವಿಸು ತಾಯಿ
ನನಗೇ ಈ ವಿಷಯವ ಕೇಳಿ 
ಸಂಕಟ ತಡೀಲಾರದೆ ಬಂದೆ !

ಅಯ್ಯೋ!!!... ಅಮ್ಮಾ.....,
ಇದೆಲ್ಲವ ನಿಂಗ್ಯಾರೇಳಿದ್ರು
ಅವರೇನೂ ಮಾಡ್ಲಿಲ್ಲ
ಅವರಂತವರಲ್ಲ ತಿಳೀತೇ
ಆದದ್ದು ಎಲ್ಲಾ ನನ್ನಿಂದಲೇ
ಹಾಳಾದ್ದು ಸಂಜೆಯ ಮಳೆಗೆ
ಆ ಕೆಲಸದವಳು ನೆನೆದಿದ್ದಳು;
ಬಟ್ಟೆ ಬದಲಾಯಿಸಲು ಹೇಳಿ
ನನ್ನ ಸೀರೆಯ ಹುಡಲು ಕೊಟ್ಟು
ಈ ಅವಾಂತರಕ್ಕೆ ಕಾರಣಳಾದೆ
ನನ್ನವರು ನಾನೆಂದು ತಿಳಿದು
ಅವಳ ಹಿಂಬದಿಯಿಂದ ಹಿಡಿದದ್ದೇ
ಇಷ್ಟೆಲ್ಲಾ ಕತೆಗೆ ಆಹಾರವಾಗಿದ್ದು
ಇನ್ನಾದರೂ ಮೆಲ್ಲಗೆ ಮಾತಾಡು
ಅವರು ಬರುವ ಹೊತ್ತಾಯಿತು ॥

Sunday, September 8, 2013

ಸ್ವರ್ಣ ಗೌರಿ

ನಾ ಬೇಡ ಬೇಡವೆಂದರೂ
ಪ್ರೀತಿಯಿಂದ ಹೇಳಿದರೂ, 
ನೀ ನನ್ನ ಮಾತುಗಳ 
ಕೇಳುವುದೇ ಇಲ್ಲಾ ನೋಡು ,
ಈ ಸ್ಮಶಾನವಾಸಿಯ,
ವೈರಾಗ್ಯ ಮೂರ್ತಿಯ
ವಿಭೂತಿಯ ಮೈಗೆ ಬಳಿದವನ
ಮಾತೆಂದರೆ ನಿನಗೂ ಅಸಡ್ಡೆಯೆ;

ಆಮಂತ್ರಣವಿಲ್ಲದೆ
ನೀ ತವರಿಗೆ ಹೋದರೆ
ನಿನಗೆ ಯಾರೂ ಅಲ್ಲಿ,
ಅಘ್ರ ತಾಂಬೂಲವಿತ್ತು
ಮುದ್ದಿನ ಕೊನೆಯ ಮಗಳು
ಮನೆಗೆ ಬಂದಿಹಳೆಂದು,
ಸ್ವಾಗತಿಸಿ ಕರೆದುಪಚರಿಸಿ,
ನಿನ್ನ ಮುದ್ದಿಸರು ತಿಳಿ ಗೌರಿ;
ನೀ ಅಲ್ಲಿಗೆ ಹೋಗದೆ ಇಲ್ಲಿಯೇ
ನೀ ಸುಮ್ಮನಿರುವುದೇ ಲೇಸು !

ಪ್ರಿಯೆ ಸ್ವರ್ಣ ಗೌರಿ,
ಹಿಂದೊಮ್ಮೆ ನೆನಪಿಸಿಕೊ
ನಿನ್ನಪ್ಪ ದಕ್ಷ ಪ್ರಜಾಪತಿಯ
ಮಹಾ ಯಜ್ಞಕ್ಕೆ
ನಾ ಬೇಡವೆಂದರೂ
ಕೇಳದೆ ನೀ ಹೋಗಿ,
ಅವಮಾನಿತಳಾಗಿ
ಯಜ್ಞ ಕುಂಡದಲ್ಲೇ ಅಸುನೀಗಿ
ಪ್ರಾಣ ತೆತ್ತದ್ದು ಮರೆತೆಯೆ,
ಹೋಗುವುದಾದರೆ
ಭೂಲೋಕಕ್ಕೆ,;
ನೀ ಈಗಲೇ ಹೋಗು
ತವರಿನ ಆನಂದವ ಅನುಭವಿಸು
ನಿನ್ನ ಭಕ್ತಿ ಭಾವದಿ ಪೂಜಿಸಿ,
ಮನೆ ಮಗಳೆಂದು ಉಪಚರಿಸುವರು
ತವರಿನ ಭಾಗೀನ ಕೊಟ್ಟು ಮಡಿಲಕ್ಕಿ
ಮಡಿಲ ತುಂಬಿ ಕಳುಹಿಸುವರು !

Friday, September 6, 2013

" ಕನಸು "

ಫೆಬ್ರವರಿ ತಾರೀಖು 10 ರ ಸೋಮವಾರ ಪ್ರಾತಃ ಕಾಲ ಸುಮಾರು ನಾಲ್ಕರ ಸಮಯದಲ್ಲಿ ನನ್ನ ಆರಾಧ್ಯದೈವ ಶಿವ ಕನಸಿನಲ್ಲಿ ಕಂಡಾಗ ನನಗಾದ ಆನಂದ ನನ್ನ ಪುಣ್ಯ, ವರ್ಣಿಸಲು ಮಾತೇ ಬರದು ಮೈನವಿರೇಳಿಸಿತ್ತು.
ದಕ್ಷಿಣ ದೃವದ ಕಡೆಯಿಂದ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ತನ್ಮಯನಾಗಿ ಮೈಮರೆತು ನಡೆಯುತ್ತಿದೆ. ಅಲ್ಲೊಂದು ಅತಿ ವಿಶಾಲವಾದ ಬೆಟ್ಟ. ಹೆಂಗಳೆಯರು ಬೆಟ್ಟದ ಮೇಲಿದ್ದ ಮಣ್ಣಿನ ರಾಶಿಯಿಂದ ಮಣ್ಣ ತುಂಬಿಕೊಂಡು ಪಕ್ಕದ ರಾಶಿಗೆ ಹಾಕುತ್ತಿರುತ್ತಾರೆ. ನನ್ನ ಕಣ್ಣೋಟ ಮೇಲಿಂದ ಕೆಳ ಭಾಗಕ್ಕೆ ಬರುತ್ತೆ. ಬೆಟ್ಟಕ್ಕೆ ಅಂಟಿಕೊಂಡಂತೆ ವಿಶಾಲವಾದ ನೀರಿಲ್ಲದ ಕೆರೆ; ಬೆಟ್ಟ ಹತ್ತಲು ಮೆಟ್ಟಿಲುಗಳು ಅಲ್ಲಲ್ಲಿ ಬಿದ್ದ ಮಳೆಯ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ.  
ಇದ್ದಕ್ಕಿದ್ದಂತೆ ನನ್ನ ನಡೆ ಬೆಟ್ಟದ ಹಿಂಬದಿಗೆ ಬರುತ್ತೆ. ಅಲ್ಲೊಂದು ಸುಂದರವಾದ ದೇವಸ್ಥಾನ ಅದನ್ನು ಅಷ್ಟೊಂದು ಗಮನಿಸದೆ ಮತ್ತೊಂದು, ಕಡೆ ಮನ ಕೇಂದ್ರೀಕರಿಸಿದರೆ , ಅಲ್ಲಿ ಮೈಮನಗಳ ಮಣಿಸುವಷ್ಟು ಎಂದೂ ನಾ ಕಾಣದಂಥಹ ವಿಚಿತ್ರ ವಿಚಿತ್ರ ದೃಶ್ಯಾವಳಿಗಳು.
ಮಹಾ ದ್ವಾರದ ರಾಜಗೋಪುರಕ್ಕೆ ಅಂಟಿ ಕೊಂಡಂತೆ ಮೂರು ಮುದ್ದಾದ ಸುಂದರ ಕೆತ್ತನೆಯ ವಿಗ್ರಹಗಳು. ಆ ಮೂರು ಮೂರ್ತಿಗಳಲ್ಲಿ ಶ್ರೀರಾಮ, ಮಾರುತಿ ಲಕ್ಷ್ಮಣರ ಭವ್ಯ ಕಲಾಕೃತಿಗಳು. ವಿಚಿತ್ರವೆಂದರೆ ಯಾವ ದಿಕ್ಕಿನಿಂದ ಅವುಗಳ ನೋಡಿದರೂ ನನ್ನ ಕಡೆಗೆ ತಿರುಗುವ ದೃಶ್ಯ ಮೈನವಿರೇಳಿಸಿತ್ತು. ಲಕ್ಷ್ಮಣನ ಕಾಲ ಬಳಿ ಹಾರಿ ಬಂದ ಪಾರಿವಾಳವ ಕಂಡು ಮಾರುತಿ ಅದನ್ನು ಹಿಡಿದಾಗಲಂತೂ ನನಗೆ ನಂಬಲಾಗಲಿಲ್ಲ. ನನ್ನಂತೆಯೇ ಬಂದ ಕೆಲ ಜನರಿಗೆ ಈ ವಿಷಯವ ಹೇಳಿದಾಗ ಅರ್ಥವಾಗದೇ ಏನೂ ಪ್ರತಿಕ್ರಿಯಸದೇ ಹಾಗೆ ಹೊರ ನಡೆದಿದ್ದರು.
ಸುತ್ತಲೂ ಕಣ್ಣಾಡಿಸುತ್ತೇನೆ ಹಳೆಯ ಕಾಲದ ಶಿಥಿಲವಾಲದ ಜೀರ್ಣೋದ್ಧಾರವಿಲ್ಲದೆ ಪಾಳು ಬಿದ್ದ ಗೋಡೆಗಳು, ಕಲ್ಪಿನ ಕಂಬಗಳು ವಿಗ್ರಹಗಳು ಅನಾಥವಾಗಿ ಗಾಳಿ ಮಳೆಗೆ ಸಿಕ್ಕ ಶಿಲಾಕೃತಿಗಳು ಒಂದೇ ಎರಡೆ ನೂರಾರು ಅಲ್ಲೊಂದು ಎರಡು ದೇವಸ್ಥಾನದ ಶಿಥಿಲಾವಸ್ಥೆಯ ಮಧ್ಯೆ ಗಣಪನ ಸುಂದರವಾದ ವಿಗ್ರಹ ಅದರಲ್ಲಿ ಒಂದು ವಿಘ್ಞಗೊಂಡ ವಿಗ್ರಹ. ತಕ್ಷಣವೇ ನನ್ನಲ್ಲಿ ಯೋಚನೆ ಮೂಡುತ್ತೆ ಈ ವಿಗ್ರಹಗಳಲ್ಲಿ ಚಂದವಿರುವ ಒಂದನ್ನು ನಮ್ಮ ಮನೆಗೆ ಕದ್ದಯ್ಯೊದರೆ ಹೇಗೆ? ಯಾವಾಗಲಾದರು ಈ ಗಣೇಶನಿಗೆ ದೇವಸ್ಥಾನ ಕಟ್ಟಿಸಬಹುದು.
ಯೋಚನೆಯ ಲಹರಿಯೊಂದಿಗೆ ನನ್ನ ನಡೆಯೂ ಮುಂದೆ ಮುಂದೆ ಸಾಗಿದಂತೆ, ರಾಜ ಮಹಾರಾಜರ ಕಾಲದ ತುಂಬಾ ದೊಡ್ಡದಾದ ಸುಂದರ ಕೆತ್ತನೆಯ ಲತಾ ಮಂಟಪ, ಕಲ್ಲಿನಲ್ಲಿ ಚಿತ್ರ ಬಿಡಿಸಿದ ಅರಳಿದ ತಾವರೆ, ಕಂಬ ಕಂಬಗಳಲ್ಲಿ ಬಗೆ ಬಗೆಯ ಚಿತ್ರ ಕಲಾ ನೈಪುಣ್ಯದ ಸಿರಿ ಸೊಬಗು. ಕೆರೆಯ ಅಂಗಳಕ್ಕೆ ಹೊಂದಿ ಕೊಂಡ ಬೆಟ್ಟದ ದೇವಸ್ಥಾನದ ಬಾಗಕ್ಕೆ ಸುತ್ತಲೂ ಕಲ್ಲಿನ ಮಟ್ಟಿಲುಗಳು . ಕೆರೆಯ ನೀರಿಂದುಂಟಾಗುವ ಅಲೆಗಳಿಂದ ತಪ್ಪಿಸಲು ಕಲ್ಲಿನಿಂದ ನಿರ್ಮಿಸಿದ ತಡೆಗೋಡೆ. 
ಒಂದೊಂದೇ ಮೆಟ್ಟಿಲುಗಳನ್ನೇರಿ, ದೇವಸ್ಥಾನದ ಪ್ರಾಂಗಣವ ದಾಟಿ ಅತ್ತ ನೋಡಿದರೆ ವಿಹಂಗಮ ನೋಟ, ಎಂದೂ ಕಾಣದ ಕಡು ಕೃಷ್ಣ ಶಿಲೆಯ " ಶಿವನ ಲಿಂಗ " ಮೈ ರೋಮಾಂಚನೆಕೆ ತಂತಾನೆ ಕಂಬನಿ ಸುರಿಯುತ್ತೆ. ಲಿಂಗದ ಅಲಂಕಾರವೇ ಅತ್ಯದ್ಭುತ ರೇಷ್ಮೆಯ ಜರಿ ಅಂಚಿನ ಶಲ್ಯ, ವಿಧ ವಿಧ ವೈವಿಧ್ಯೆತೆಯ ಹೂಗಳ ಮಾಲೆ, ದೊಡ್ಡದಾದ ಮಲ್ಲಿಗೆಯ ಹೂವಿನ ಹಾರ ಹಣೆಗೆ ವಿಭೂತಿಯ ತ್ರಿಪುಂಡ ಲೇಪನ.
ಸ್ವರ್ಗವೇ ಭುವಿಗಿಳಿದಂತೆ ಭಾಸ; ಭಾವಾತಿರೇಕದಿಂದ ಕೈ ಮುಗಿದು, ನಾಮ ಸ್ಮರಣೆಯ ಮಾಡಿ ತೂಗಾಡುವ ಗಂಟೆಗಳಲ್ಲಿ ಒಂದ ಬಾರಿಸಿದರೆ ಶಬ್ದವೇ ಇಲ್ಲ   ನನ್ನಂತೆಯೇ ದರ್ಶನಾರ್ಥಿಗಳು ಗಂಟೆಯ ಬಾರಿಸಿದಾಗಲೂ ಶಬ್ದದ ನೀನಾದ ಬರದಿದ್ದಾಗ ಇದೇನು ಸೋಜಿಗ ಎಂದು ಲಿಂಗದ ಬಳಿಯಿಟ್ಟ ಕುಂಕುಮ ವಿಭೂತಿಯ ಹಣೆಗೆ ಹಚ್ಚಿ ಶಿವನಾಮ ಸ್ಮರಣೆ ಮಾಡುತ ಹಿಂತಿರುಗುತ್ತೇನೆ. 
ಜನರೆಲ್ಲಾ ಒಬ್ಬೊಬ್ಬರಾಗಿ ಹೊರಟು ಹೋಗುತ್ತಾರೆ, ದೇವಸ್ಥಾನದ ಪೂಜಾರಿಣಿ ನನ್ನ ಹೊರ ಕರೆಯುತ್ತಾಳೆ; ನಾ ಹೊರ ಬಾಗಿಲಿಗೆ ಬರುತ್ತಿದಂತೆ ಬಾಗಿಲು ಹಾಕಿಕೊಳ್ಳಲು ಕದಗಳ ಎಳೆದು ಕೊಳ್ಳುತ್ತಾಳೆ ನಾನಿನ್ನು ಹೊರ ಹೊಗುವುದು ಹೇಗೆಂದು ಪ್ರಶ್ನಿಸುತ್ತೇನೆ.
ಹಿಂಬದಿಯಿಂದ ನನ್ನಂತೆ ಹೊರ ಹೋಗಲು ವ್ಯಕ್ತಿಯೊಬ್ಬ ಹೊಸಿಲು ದಾಟಿ ಹೊರಟಂತೆ ನಾನೂ ಹೋಗಬೇಕು ಎನ್ನುವಾಗಲೇ ಒಂದು ವಿಚಿತ್ರ ಅನುಭೂತಿಯುಂಟಾಗಿ ನೋಡಲು ಹೆಡೆಯ ಆಕಾರದಿ ಬಳ್ಳಿಯಂತೆ ನನ್ನ ಕಾಲುಗಳಿಂದ ಮೈ ಪೂರ ಆವರಿಸಿ ಕೊಳ್ಳುತ್ತೆ ಭಯವಾದರೂ ಶಿವನಾಮಸ್ಮರಣೆಯಿಂದ ಅಲ್ಲಿಯೇ ನಿಲ್ಲಲಾಗದೆ ಹೊರ ಬರಲಾಗದೆ ಒದ್ದಾಡಿದರೂ ಆ ಹಾವು ತಲೆಯ ಮೇಲ್ಬಾಗಕೆ ಬಂದು ಹೆಡೆಯೆತ್ತಿ ನನ್ನಲ್ಲಿಯೇ ಕಲ್ಲಿನಂತೆ ಲೀನವಾಗುತ್ತೆ. 
ಓಂ ನಮಃ ಶಿವಾಯ
ಶಿವಚೆನ್ನ
೧೦.೦೨.೧೯೯೧

Thursday, August 29, 2013

ಮರೆಗುಳಿ

ಇತ್ತೀಚಿನ ನನ್ನ ಮರವಿಗೆ
ದಾರಿ  ತಪ್ಪಿ ಇನ್ಯಾರದ್ದೋ
ಮನೆಯ ಬಾಗಿಲು ತಟ್ಟಿ
ಅಪಹಾಸ್ಯಕ್ಕೆ ಗುರಿಯಾಗಿ
ನಾನೇ ಕಕ್ಕಾಬಿಕ್ಕಿಯಾಗಿದ್ದೆ 
ಪ್ರೊಫೇಸರ್ ಸಾಹೇಬರೇ
ಇದೇನು ಸ್ವಾಮೀ ನೀವಿಲ್ಲಿ
ಪರಿಚಯದವರು ನಕ್ಕರೆ
ಅಪರಿಚಿತರು ಬೈದದ್ದುಂಟು;
ಸಂಜೆಯಾದರೆ ಸಾಕು
ಕುಡಿದು ಗೊತ್ತಾಗದೆ
ತೂರಾಡುವ ಇಂಥಹ 
ಕುಡುಕ ನನ್ನ ಮಕ್ಕಳಿಗೆ  
ಎರಡಿಟ್ಟರೆ ಸರಿ ಹೋಗುವುದು
ಇಲ್ಲಾ ಈ ವಯಸ್ಸಿಗೆ ಅರಳೋ ಮರುಳೊ
ಅಥವಾ ಅಮಾವಾಸ್ಯೆ ಹುಣ್ಣಿಮೆಗೆ ಕೆರಳೊ   
ಇವರಿಗೆ ವಾಸಿಯಾಗದ ಹುಚ್ಚಿರ ಬೇಕು!  
ಅವರ ಮಗನೋ ಮಗಳೋ  
ಅಯ್ಯೋ ಅಪ್ಪಾ ಅವರ ಬಿಡಿ  
ಆ ಎರಡನೇ ಬೀದಿಯಲ್ಲಿರುವ  
ಮ್ಯಾತಮೆಟಿಕ್ಸ್ ಪ್ರೊಫೇಸರ್ 
ತುಂಬಾ ಒಳ್ಳೆಯವರು  
ಪಾಠ ಮಾಡುವುದರಲ್ಲಿ ಎತ್ತಿದ ಕೈ;  
ಹುಚ್ಚೂ ಇಲ್ಲ ಕುಡಿತವೂ ಇಲ್ಲ 
ಸ್ವಲ್ಪ ಮರೆಗುಳಿಗಳಷ್ಟೇ,
ಅಯ್ಯೋ ಸ್ವಾಮೀ,
ನೀವು ಯಾರೆಂದು ಗೊತ್ತಾಗದೆ 
ಯಡವಟ್ಟಾಯಿತು ದಯವಿಟ್ಟು
ನನ್ನನ್ನ  ಕ್ಷಮಿಸಿ ಕ್ಷಮಿಸಿ,
ವಿದ್ಯಾದೇವತೆಯಂತೆ ಬಂದಿರುವಿರಿ 
ದಯಮಾಡಿ ಮನೆಯೊಳಗೆ ಬಂದು 
ಹಾರೈಸಿ, ಕಾಫೀ ತಿಂಡಿಯ ಸ್ವೀಕರಿಸಿ ;
ಈ ನನ್ನ  ಮರೆವಿಗೆ ನಿಮಗೇನಾದರೂ  ।
ಕಾರಣ ತಿಳಿದಿದ್ದರೆ ಬೇಗನೆ ತಿಳಿಸಿ ! 
ಸ್ಪೂರ್ತಿ: ದಾರಿ ತಪ್ಪಿದ ಮಗ

Monday, August 26, 2013

ಪ್ರೀತಿಸಿದವಳ ಅಭಯ

ಇದು ಹೇಳೀ ಕೇಳಿ
ಆರಕ್ಷಕ ಠಾಣೆ ರ್ರೀ,
ಏನೂ ಮಾತಾಡದೆ ತೆಪ್ಪಗಿರಿ
ಅಲ್ಲಿಯವರಿಗೆಲ್ಲಾ ಕೋಪವಿದೆ
ಮಾತಾಡಿ ಸಿಟ್ಟು ಭರಿಸದಿರಿ
ಈಗಾಗಲೇ ನನ್ನ ಅಪ್ಪ,
ಮಗಳ ಹೊತ್ತೊಯ್ದಿಹನೆಂದು
ನಿಮ್ಮಾ ಹಾಗು,
ನಿಮ್ಮ ಮನೆಯವರ ಮೇಲೆ
ದೂರು ದಾಖಲಿಸಿರುವರು
ಅವರೇನಾದರೂ ನಮ್ಮ ಕಂಡು
ಒಡೆದು ಬಡಿದರೆಂದು ಕೋಪಕೆ
ಅಲ್ಲಿಯೇ ಜಗಳಕೆ ನಿಲ್ಲದಿರಿ,
ನಿಮಗೇನಾದರೂ
ಹೆಚ್ಚೂ ಕಡಿಮೆಯಾದರೆ
ನನಗೂ ಕಷ್ಟ ಕೋಟಲೆಯೆ
ಆಮೇಲೆ ಆ ದೇವರೇ ದಿಕ್ಕು;
ಒಂದೆರಡು ವರ್ಷಗಳ ಕಾಲ
ಜೈಲಿನಲ್ಲಿ ಕಳೆಯಬೇಕಾದೀತು
ಎಲ್ಲವನು ನಾ ನಿಭಾಯಿಸುವೆ
ಎಲ್ಲದಕ್ಕೂ ಕೋಲೆ ಬಸವನಂತೆ
ನೀವು ತಲೆಯಾಡಿಸಿದರೆ ಸಾಕು !!
ಅರ್ರರೇ.....ಇಷ್ಟಕ್ಕೆಲ್ಲಾ ಹೆದರಿಕೆಯೆ
ಆ ಹಾ ಮೂಗು ಕೆಂಪಾಯಿತು ನೋಡಿ
ನನ್ನ ಪ್ರೀತಿಸುವಾಗ ಇದ್ದ ಧೈರ್ಯವೆಲ್ಲ
ಪೊಲೀಸ್ ಠಾಣೆಯ ಮೆಟ್ಟಿಲೇರುವಾಗ
ಭಯವೇ, ಎಲ್ಲವೂ ಕರಗಿ ಹೋಯಿತೇ
ನನಗೆಂಥಹದೆ ಭಯ ನೀನಿರುವಾಗ
ಇಂಥಹ ಸಮಯದಲ್ಲೂ ಕೀಟಲೆಯೇ
ಸದಾ ಪ್ರೀತಿಸುವಳ ಅಭಯವಿರುವಾಗ !!

Sunday, August 25, 2013

" ಕಪ್ಪೇ ಚಿಪ್ಪೊಳಗಿನ ಮುತ್ತು "

ನನ್ನಾ ಅವಳ ನಿಶ್ಚಿತಾರ್ಥ,
ಇನ್ನೆರೆಡು ವಾರಗಳಿರುವಾಗ
ನಾನವಳ ಮತ್ತೇ ಕೇಳಿದ್ದೆ;
ನಿನ್ನ ಅಪ್ಪ ಅಮ್ಮರ ಒತ್ತಾಸೆಗೆ
ನೀ ಮನಸ್ಸಿಲ್ಲದೆ ಒಪ್ಪಿದ್ದರೆ,
ಈಗಲೂ ನನ್ನ ಬಲುವಂತವಿಲ್ಲ
ನನ್ನ ಸೋದರತ್ತೆಯ ಮಾತಿಗೆ
ನಾ ಕಟ್ಟು ಬಿದ್ದು ಒಪ್ಪಿದೆನೇ ವಿನಃ
ನಿನ್ನ ಮೇಲಿನ ಮೋಹದಿಂದಲ್ಲ;
ನೀ ಅಂದೇ ಎಲ್ಲರೆದಿರೂ ಹೇಳಿದ್ದೆ
ಓದು ಬರಹ ಅಷ್ಟೇನೂ ಚೆನ್ನಿರದ,
ಈ ಹಳ್ಳಿಗಮಾರನ, ಹೆಣ್ಣೆಗಪ್ಪಿನ
ಕೆಂಗಣ್ಣಿನ ಕಚ್ಚೆ ಪಂಚೆಯವನ
ನಾ ಹೇಗೆ ಮೆಚ್ಚಿ ಕೊಳ್ಳಲಿ ಎಂದು !

ಇದೇ ಯೋಚನೆಯಲ್ಲಿ ಮುಳುಗಿದವನ
ಹಿಂಬದಿಯಿಂದ ಗೊತ್ತಾಗದಾಗೆ ಬಂದು
ಬಿಗಿದಪ್ಪಿದವಳ ಕಂಡು ಒಂದು ಕ್ಷಣ
ನಾನೇ ಬೆಕ್ಕಸ ಬೆರಗಾಗಿ ಹೋಗಿದ್ದೆ
ಹಾಯ್ ಜುಟ್ಟು ಮಾಮ್ ಕಂಗ್ರಾಟ್ಸ್
ಐ ಯಾಮ್ ಸೋ ಹ್ಯಾಪಿ ಯು ನೋ
ಅಂದಿನ ಹತ್ತಾರು ಪತ್ರಿಕೆಗಳ ಹಿಡಿದು
ಮುಖ ಪುಟದಲ್ಲಿನ ನನ್ನ ಭಾವ ಚಿತ್ರವ
ಅದರಲ್ಲಿನ ವಿಷಯವ ಓದಿ ಖುಷಿಗೊಂಡಿದ್ದೆ
ಭಾರತ ಸರ್ಕಾರದಿಂದ ಕೊಡ ಮಾಡುವ
ಸಾವಯವ ಕೃಷಿಯ ಹರಿಕಾರ
ಶ್ರೀ ಮಹೇಶ್ ರವರಿಗೆ ಕೃಷಿ ರತ್ನ ಪುರಸ್ಕಾರ
ಇದೇ ತಿಂಗಳು ಇಪ್ಪತ್ತಕ್ಕೆ
ರಾಷ್ಟಪತಿಗಳ ಭವನದಲ್ಲಿ ಪ್ರಧಾನ  !!!

Saturday, August 24, 2013

ಅನುಮಾನದ ನೆರಳು

ನಿನಗೇನಾಯಿತೆಂದು
ಈ ರೀತಿಯ ಸಿಟ್ಟು,
ಎಂದೂ ಕಾಣದ ಸಿಡುಕು
ನೀ ಏನೇನೋ
ನಿನ್ನ ಮನಸ್ಸಲ್ಲಿಟ್ಟುಕೊಂಡು
ನೀ ಹೀಗೆಲ್ಲಾ
ನನ್ನ ತಾಳ್ಮೆಯ ಕೆಣಕದಿರು
ಬಾಯಿ ಇದೆ ಎಂದು ಬಾಯಿಗೆ
ಬಂದಂತೆ ನೀ ಮಾತಾಡದಿರು
ನಾ ಎಂದಾದರು,
ನಿನ್ನನ್ನ ಹೀಗೆಲ್ಲಾ
ಅನುಮಾನದ ದೃಷ್ಟಿಯಲ್ಲಿ
ನಾ ನೋಡಿರುವೆನೆ
ಮದುವೆಯಾಗಿ
ಇಷ್ಟು ವರ್ಷಗಳಾದರೂ
ನಮಗೆ ಎರಡು
ಮುದ್ದಾದ ಮಕ್ಕಳಿದ್ದರೂ
ನನ್ನ ಸಹೋದ್ಯೋಗಿ
ಮಹಿಳೆಯ ಜೊತೆಗೆ
ಆತ್ಮೀಯವಾಗಿ
ಮಾತಾಡಿದರೆ ನಿನಗೆ
ಎಲ್ಲಿಲ್ಲದ ಅನುಮಾನದ
ವಕ್ರ ವಕ್ರ ಆಲೋಚನೆಗಳೆ !
ಹೆಂಡತಿಯಾದವಳಿಗೆ
ಇವೆಲ್ಲಾ ಇರಬೇಕ್ಕಾದ್ದೇ
ಕಾಳಜಿ, ಜಾಗ್ರತೆ
ಹಾಗೆಯೇ ಗಂಡನ ಬಗ್ಗೆ
ಗೌರವದ ನಂಬಿಕೆ
ಅದೆಲ್ಲವ ಬಿಟ್ಟು ಹೀಗೆ,
ಅನುಮಾನದ ಹುತ್ತವ
ಮೈಮನಸ್ಸುಗಳಲ್ಲಿ
ನೀ ಬೆಳೆಸಿಕೊಂಡರೆ
ಸಂಸಾರ ದಾರಿ ತಪ್ಪಿ
ನಿಸ್ಸಾರವಾಗದಿರದು ಎಚ್ಚರ !     
ಬೈದು ಹೊಡೆದು
ಬುದ್ಧಿ ಹೇಳೋಣವೆಂದರೆ
ನೀನೂ ಸಹ ವಿದ್ಯಾವಂತೆ,
ಮೇಲಾಗಿ ಉದ್ಯೋಗಿ
ಇಂದು ತಿಳಿದು ಕೊಳ್ಳುವೆ,
ನಾಳೆ ತಿಳಿಯುವೆ
ಎಂಬೆಲ್ಲಾ ಕನಸುಗಳಷ್ಟೆ,
ನಾ ಈಗ ಕಾಣ ಬೇಕಿದೆ !

Friday, August 23, 2013

" ಶ್ರಾವಣೀ ಪೂರ್ಣಮಿ "

ಏನೂ ಮುಚ್ಚಿಡದೆ ನನ್ನ ಬಳಿ
ನನಗೆಲ್ಲಾ ನಿಜ ಹೇಳಿ,
ಮನೆ ಕೆಲಸದವಳಂತೆ ಕಾಣವ
ನಿಮ್ಮ ಕಂಡರೇಕೋ ದೇವರನ್ನು
ಕಂಡಂತಹ ಶ್ರದ್ಧಾಭಕ್ತಿ;
ಆ ಕಣ್ಣಗಳಲಿ ಸಂತಸದ ಹೊಳಪು
ಒಂದೇ ಸಮ ನನ್ನವಳು ಪ್ರಶ್ನಿಸಿ
ನನ್ನ ತಬ್ಬಿಬ್ಬಾಗಿಸಿದ್ದಳು;
ಇದು ಎಂಥಹದೇ ನಿನ್ನನುಮಾನ
ಯಜಮಾನನಲ್ಲಿ ಇರಬೇಕಾದ್ದೇ ಗೌರವ,
ಪತಿಭಕ್ತಿ ಐ ಮೀನ್
ಮನೆ ಯಜಮಾನನಲ್ಲಿ ಭಯಭಕ್ತಿ;
ನೀ ರಸ್ತೆ ದಾಟುವಾಗ
ಅಪಘಾತವಾಗಿ ರಕ್ಷಿಸಿ,
ಆಸ್ಪತ್ರೆಗೆ ಸೇರಿಸಿ
ನಿನ್ನ ಕಾಪಾಡಿದರೆಂದು,
ಮನೆಗೆ ಕರೆತಂದು
ಕೆಲಸಕ್ಕೆ ಇಟ್ಟುಕೊಂಡವಳು ನೀನು
ಈ ಆರು ತಿಂಗಳುಗಳಲಿ
ನಿನಗೆ ಅಚ್ಚು ಮೆಚ್ಚು; ಹೀಗಿರುವಾಗ
ನೀ ಏನೇನೋ ಹೀಗೆಲ್ಲಾ ಯೋಚಿಸಿ
ಚಿಂತಿಸಿ ಆಯಾಸ ಮಾಡಿ ಕೊಳ್ಳದಿರು
ಆಫೀಸಿಗೆ ಟೈಮ್ ಆಯಿತು ನಾ ಬರುವೆ  !!!!

Wednesday, August 21, 2013

ನಿದ್ರಾಭಂಗ

ನಿನ್ನ ಮಗನಿಂದಾಗಿ
ನಾ ನೆಮ್ಮದಿಯಿಂದ
ನಿದ್ರಿಸುವಂತಿಲ್ಲ ಕಿಶೋರಿ,
ಅವನಿಗೂ ವಯಸ್ಸು
ಇನ್ನೇನು ನಾಲ್ಕಾಯ್ತು,
ನನ್ನಮ್ಮನ ಬಳಿ ಮಲಗಿಸು
ನೀ ಬಂದು ಹಾಗೆಯೇ,
ಆ ತೆರೆಯ ಪಕ್ಕಕೆ ಸರಿಸು
ನನ್ನವಳು ನಕ್ಕಿದ್ದಳು;
ಆ ಹಾ ಚಪಲ ಚೆನ್ನಿಗರಾಯರು
ಅಯ್ಯೋ ಪೆದ್ದೀ ಅದಕ್ಕಲ್ಲವೇ
ತಾಯೀ ಮಗ ಇಬ್ಬರೂ ಸೇರಿ,
ಹಗಲೆಲ್ಲಾ ಚೆನ್ನಾಗಿ ನಿದ್ರಿಸಿ
ರಾತ್ರಿಯೆಲ್ಲಾ ಅವನಿಗೆ,
ನೀತಿ ಕತೆಗಳ ಹೇಳಿ ಹೇಳಿ
ನೀ ಮುದ್ದು ಮಾಡಿ ಕೆಡಿಸಿರುವೆ;
ನಾ ನಿದ್ರಿಸುವುದಾದರೂ ಹೇಗೆ
ಸಾಲದಕ್ಕೆ ಆಗಾಗ,
ಅವನ ಒದ್ದಾಟ ಬೇರೆ
ಮಧ್ಯ ಮಧ್ಯದಲಿ;
ಅವನ ಸಂತೈಸುವಿಕೆಯಲಿ
ನಿನ್ನ ಲಾಲಿಯ ಹಾಡು ಬೇರೆ,
ಕೇಳಿ ಕೇಳಿ ನನಗೂ ಸಾಕಾಗಿದೆ
ನಿಮ್ಮಿಬ್ಬರ ಸಹವಾಸ ದೋಷದಿಂದ
ದಿನ ರಾತ್ರಿ ನನಗೆ ನಿದ್ರಾಭಂಗ ॥

ಗುಟ್ಟು ರಟ್ಟು

ಗೆಳೆಯಾ ನನ್ನಾ ನಿನ್ನ
ಪ್ರೀತಿಯ ಸಂಬಂಧವ,
ನಮ್ಮ ಮನೆಯವರಿಗೂ
ಯಾರಿಗೂ ಗೊತ್ತಾಗದಂತೆ
ಗುಟ್ಟಾಗಿ ನಾ ಮುಚ್ಚಿಡ ಬಲ್ಲೆ;
ಆದರೆ ನಾ ಇಂದು
ನಮ್ಮಿಬ್ಬರ ಕ್ಷಣಿಕ ಸುಖಕೆ
ಅಂದು ಸುಮ್ಮನಿರದೆ,
ಒಂದು ಕ್ಷಣ ಮೈಮರೆತ
ಅತಿ ಘೋರ ತಪ್ಪಿಗೆ;
ನನ್ನ ಒಡಲೊಳಗೆ
ದಿನೇ ದಿನೆ ಬೆಳೆಯುತ್ತಿರುವ
ನಿನ್ನ ಸ್ನೇಹದ ಪ್ರತಿಪಲವ
ಹೊತ್ತು ತಿರುಗಾಡುತಿರುವೆ
ನಾ ಹೇಗೆ ತಾನೆ ಗುಟ್ಟಾಗಿಡಲಿ ॥

ಇದ ತೆಗಿಸಿ ಬಿಡುವ ಎಂದರೆ
ಕಾಲ ಮೀರಿ ನಾಲ್ಕಾಗಿದೆ,
ನೀ ನನ್ನ ಕೇಳ ಬಹುದು
ತಿಂಗಳು ತಿಂಗಳು ನೀ ಸರಿಯಾಗಿ ಮುಟ್ಟಾಗುತ್ತಿರಲಿಲ್ಲವೇ ಎಂದು
ಒಮ್ಮೊಮ್ಮೆ ಮುಟ್ಟಿನಲೂ;
ದೇಹ ಸ್ಥಿತಿಯಿಂದ ಏರುಪೇರಾಗಿ
ಮುಟ್ಟು ಮುಂದೂಡುತ್ತಿತ್ತು
ಮೊದ ಮೊದಲು ವಾಂತಿಯಾದರೂ
ಪಿತ್ತವಿರಬೇಕೆಂದು ಜೀರಿಗೆಯ ತಿಂದು
ನಾ ಸುಮ್ಮನಾಗಿ ಈಗ ಅಳುವಂತಾಗಿದೆ ॥ 

Monday, August 19, 2013

" ಬಾಡಿಗೆ ತಾಯಿ "

ನಾ ನಿನ್ನಾ ಹಡೆದವ್ವ,
ಎತ್ತಿ ಮುದ್ದಾಡಲಿಲ್ಲ
ನಿನ್ನಾ ನಾ ಹೊತ್ತು;
ಎದೆಗಪ್ಪಿ ತಿರುಗಾಡಲಿಲ್ಲ
ಎದೆಯ ಹಾಲನು ಕುಡಿಸಿ,
ನಿನ್ನಾ ನಗುವ ನಾ ನೋಡಲಿಲ್ಲ
ಅಳುವಾಗ ನಿನ್ನ ನಾ ರಮಿಸಲಿಲ್ಲ;
ಜೋ ಜೋ ಜೋ ಮುದ್ದು ಕಂದಾ
ನೀ ಮಲಗೆಂದು ನಾ ಹಾಡಲಿಲ್ಲ ॥

ಈ ನತದೃಷ್ಟೆ ತಾಯಿ ಪಾಪಿಷ್ಟಳಲ್ಲ
ನಿನ್ನ ಹಡದೇ, ನಾ ಹಣವ ಪಡೆದೆ
ಏಳೇಳು ಜೊತೆ ಹೆಜ್ಜೆಗಳ ಇಡದಲೇ
ಏಳೂ ಬೀಳುಗಳಲಿ ನಾ ಬಿದ್ದೇಳುತಲಿ, ದಾಂಪತ್ಯದಾನಂದವ ಕಾಣದಲೇ
ಪರರಿಗೆ ಮೈ ಮಾರಿಕೊಳ್ಳದೆಲೆ,
ಇನ್ಯಾರದೋ ತೆಕ್ಕೆಗೆ ನಾ ಜಾರದೆ
ನನ್ನಾ ಕಷ್ಟ ಕಾರ್ಪಣ್ಯಕೆ
ನಾ ನಿನ್ನ ಹಡೆದಂತ ತಾಯಿ;
ಬಾಡಿಗೆ ತಾಯಿ ನಾ ಬಾಡಿಗೆ ತಾಯಿ ॥

Sunday, August 18, 2013

ಅಣ್ಣಾ - ತಂಗಿ

ಅಳಬೇಡ ನನ್ನಾ ಮುದ್ದೀನ ತಂಗ್ಯವ್ವ
ನಿನ್ನ ಅಣ್ಣಯ್ಯ ತವರಿಂದ ಬಂದೀವ್ನೀ
ಗಿಣ್ಣಾಲು ಒಬ್ಬಟ್ಟು ನಿನಗಾಗಿ ತಂದೀವ್ನಿ
ತಿಂದುಂಡು ಈ ಮಲ್ಲಿಗೆಯ ಮುಡಿದೇಳು ॥

ಮನೆಯಲ್ಲಿ ಅತ್ತೆಮ್ಮ ಮಾವಯ್ಯ ಭಾವ
ನಿನ್ನಾ ನಾದಿನಿ ಎಲ್ಲಾರೂ ಸೌಖ್ಯಾನೆ
ನಿಂಗೆ ತವರೂರ ಸುಖ ದುಃಖ ಮುಖ್ಯಾನೆ
ಹೇಳವ್ವ ನನ್ನಾ ಬಂಗಾರದ ಮುದ್ದೀನ ತಂಗಿ ॥

ಬಾವ ಬರುವಾ ಮುಂಚೆ ನೀ ಕುಚ್ಚೀನ
ಕಾಸಗಲದ  ಅಂಚಿನ ಸೀರೆಯ ಹುಟ್ಟು
ಹಚ್ಚಸಿರಿನ ಬಳೆ, ಬಂಗಾರವ ತೊಟ್ಟು
ಮಾಲಕುಮಿ ಬಂದಾಂಗೆ ಮೇಲೇಳು ॥

ನಾನೇ ನಿನಗೆಲ್ಲಾ ತಾಯ್ತಂದೆ ಬಂಧು ಬಳಗ
ನನ್ಮುಂದೆ ಹೇಳವ್ವ ನಿನ್ನಾ ಸುಖ - ದುಃಖಾವ
ನಿನ್ನತ್ತೆಮ್ಮ ಮಾವ ನಾದಿನಿ ಕಷ್ಟಾವ ಕೊಟ್ಟಾರೆ
ಸರಿಮಾಡಿ ನಾದಿನಿಯ ಕೈಯಾ ನಾ ಹಿಡಿಯುವೆ ॥

ಇನ್ಮುಂದೆ ನಿನಗಿರದು ಕತ್ತಾಲ ಬಾಳು
ಬಾಳೆಲ್ಲ ನೆಮ್ಮದಿಯ ಹಾಲ್ಬೆಳದಿಂಗಳು
ನನ್ನವ್ವ ಸುಖವಾಗಿ ನೀ ನಗುತಿರ ಬೇಕು
ನೂರ್ಕಾಲ ಹಾಯಾಗಿ ನೀ ಬಾಳಬೇಕು ॥

Saturday, August 17, 2013

ಒಣ ಪ್ರತಿಷ್ಟೆ

ಹಠದಲ್ಲಿ ಇಬ್ಬರೂ
ಸರಿ ಸಮಾನರೇ
ಹಾಗೆಯೇ ಆಗಾಗ
ಮುನಿಸಿ ಕೊಳ್ಳುವುದರಲ್ಲಿ
ನನ್ನವಳದು ಎತ್ತಿದ ಕೈ;
ನಮ್ಮಿಬ್ಬರ ಜಗಳದಲಿ
ಪಾಪ, ಬಡಪಾಯಿ
ಮಕ್ಕಳ ಗತಿಯಂತೂ
ಆ ದೇವರಿಗೆ ಪ್ರೀತಿ ॥

ಬೇಡ ಬೇಡವೇ ರುಕ್ಕೂ
ಆ ಉದ್ಯೋಗದಾಸೆ,
ಜಂಜಾಟ, ನಿನಗೇಕೆ ಬೇಕು
ಈ ಮನೆ ಮಕ್ಕಳ ನನ್ನನ್ನ
ನೋಡಿಕೊಂಡರೆ ಸಾಲದೆ,
ಅಲ್ಲಿಯೂ ದುಡಿದು, ಸಾಕಾಗಿ
ನೀ ಇಲ್ಲಿಯೂ ದುಡಿಯಲಾರೆ;
ನಾ ಸಾಕಷ್ಟು ದುಡಿದು
ತಂದಾಕುವಾಗ, ತಿಂದುಂಡು
ನಮಗೂ ಒಂದಷ್ಟು ಬೇಯಿಸಿ
ಹಾಯಾಗಿ ಇರುವುದು ಬಿಟ್ಟು,
ನಿನ್ನದೆಂತಹದೇ
ಹೊಸ ಬಗೆಯ ವ್ಯಾಮೋಹ,
ಈ ಒಣ ಪ್ರತಿಷ್ಟೆ;
ನೆಮ್ಮದಿಯ ಜೀವನವ ಬಿಟ್ಟು
ನೀ ದುಡಿದು ಯಾರ ಉದ್ಧರಿಸ ಬೇಕು ॥

Thursday, August 15, 2013

ಆಲೋಲಿಕ

ಒಲವಿನ ಗೆಳತಿ, ನಾ ನಿನಗೆ
ಹೇಳಬೇಕೆಂದು ಕೊಂಡ
ಈ ಮನದ ಮಾತುಗಳು,
ನಿನ್ನ ಕಂಡ
ಮರು ಘಳಿಗೆಯೇ;
ಹೇಳಲಾಗದೆ
ನನ್ನಲ್ಲಿಯೇ ಹಾಗೆಯೇ
ಉಳಿದಾಗ
ನೀ ಹೇಳಿದ್ದೆ ನನಗೆ,
ನಾಡಿದ್ದು ನನ್ನ ನೋಡಲು
ದೂರದ ಊರಿಂದ
ಹುಡಗನ ಮನೆಯವರು ಬರುವರೆಂದು
ಆ ಕ್ಷಣವೇ ಈ ಭೂಮಿ ಬಿರಿದು
ಬಾಯ್ತೆರೆಯ ಬಾರದೆನಿಸಿ
ಕಣ್ಣ ತುಂಬಿ, ಮನ ತುಂಬಿ
ಕಂಬನಿ ಬಂದಿತ್ತು; 
ನಿನಗೆ ತೋರ್ಗೊಡದೆ
ನಾ ಜೋರು ನಗೆಯಲ್ಲಿ ನಕ್ಕಿದ್ದೆ ॥

ಅಯ್ಯೋ...
ಹುಚ್ಚು ಹುಡುಗಾ,
ನಾ ನಿನ್ನ ಬಿಟ್ಟು
ಬಾಳುವೆನೇನೋ
ನೀನಿಲ್ಲದೆಯೇ;
ನಾ ಹೇಗೆ ಬದುಕುವೆನೋ
ನೀ ನನಗೆ ಹೇಳಲಾಗದೆ
ಒದ್ದಾಡುವುದ ಕಂಡು
ತಮಾಷೆಯ ಮಾಡೋಣವೆನಿಸಿ
ಒಂದಷ್ಟು ಗೋಳಾಡಿಸುವ ಎಂದು
ಹಾಗೆ ಹೇಳಿದೆನೋ ನಲ್ಲಾ
ನನ್ನೊಳಗೆ ತಡೆಯಲಾಗದ
ಧುಮ್ಮಿಕ್ಕುವ ನಗುವ ಕಂಡು
ಇಡೀ ಉಧ್ಯಾನ ವನವೆಲ್ಲಾ
ಓಡಿಸಿಕೊಂಡು ಸುತ್ತಾಡಿಸಿ
ನಿನ್ನ ಬಾಹುಗಳಲಿ ಬಂದಿಸಿದ್ದೆ ॥