ಭಾವ ಲಹರಿ
Wednesday, April 22, 2020
ಪುಣ್ಯಾತ್ಗಿತ್ತಿ
ನನ್ನವಳು ನಿದ್ದೆಗಣ್ಣಲ್ಲೇ
ಆಕಳಿಸುತ್ತಾ, ಮೈಮುರಿದು
ನಾನ್ ಎದ್ದು ರೆಡಿಯಾಗಿ ಬರೋದ್ರೊಳಗೆ
ಟಿಫಿನ್ ರೆಡಿಯಾಗಿದ್ರೆ ಸರಿ
ಇಲ್ಲಾಂದ್ರೆ ಗೊತ್ತಲ್ಲ;
ಅವಳು ಕೆದರಿದ ತಲೆಗೂದಲು
ಕೆಂಪನೆಯ ಕಣ್ಣು ನೋಡಿಯೇ,
ಭಯಕೆ ಮಾತು ಬರದೆ ನಾ ನಿಂತಿದ್ದು ನೋಡಿ
ಜುಟ್ಟಿಡಿದು ತಿರುಗಿಸಿದ ರಭಸಕ್ಕೆ
ಪ್ರಾಣ ಕೈಗೆ ಬಂದಿತ್ತು.
Wednesday, February 5, 2020
ನೀ ಏನೆ ಹೇಳು
ಮನದೊಳಗೆ,
ಮುಂಗಾರಿನ ಮಳೆಗೆ
ಮೇಳೈಸಿದೆ
ಕರಿಮುಗಿಲುಗಳ ಸಾಲು;
ನಿನ್ನ ಕಣ್ಸನ್ನೆಯ ಮಿಂಚಿಗೆ
ನಗೆಯಬ್ಬರದ ಗುಡುಗಿಗೆ,
ಗುನು ಗುನುಗುತ
ನರನಾಡಿಗಳಲಿ
ಉಲಿ ಉಲಿಯುತ
ಅಲೆಯಲೆಯಾಗಿ
ಆವರಿಸಿದೆ ನನ್ನನ್ನೇ....
" ಈ ಪ್ರೀತಿ ಒಂಥರಾ ನಶೆಯ ರಾಣಿ "
ನೀ ಮುತ್ತಿಟ್ಟ ಮರುಘಳಿಗೆ
ನನ್ನದರಗಳಿಗೂ ಮೆರವಣಿಗೆ
ಕನಸುಗಳಿಗೂ ಏಕೊ ಕನವರಿಕೆ
ಧಣಿವಾಗದು ಎಂದೆಂದಿಗೂ
ಮನ ಹುಚ್ಚೆದ್ದು ಕುಣಿದಾವು
ಮುಚ್ಚಿಟ್ಟರು, ಬಚ್ಚಿಟ್ಟರು
ಗರಿಗೆದರಿ ನಾ ಹಾರಲೇ
ನೀ .... ಹೇಳೆ ಗೆಳತಿ
ನನ್ನೊಳಗೂ ನಿನ್ನಂತೆಯೇ
ನೀಲಾಂಬರದ ಕೊನೆಗೂ
ಗುರಿ ಮುಟ್ಟುವ ತವಕ
ಮೈಮನ ಪುಳಕ ಅಲ್ಲವೇನೆ.
Monday, February 3, 2020
ಮುಷ್ಕರ
ನನ್ನವಳ ಖುಷಿಗೆ
ಕಾರಣ ಏನೆಂದು ಗೊತ್ತಾಗದೆ,
ನಾನಿಲ್ಲಿ ಒದ್ದಾಡುತ್ತಿದ್ದರೆ
ಒಬ್ಬರಾದರು ಬಾಯಿ ಬಿಡಬಾರದಿತ್ತೆ
ಇಂದು ವಿಶೇಷವೇನಿರಬಹುದು ?
ಜನುಮ ದಿನ, ಮದುವೆ ವಾರ್ಷಿಕೋತ್ಸವ
ಅಲ್ಲವೇ... ಅಲ್ಲ
ಹಾಳಾದ್ದು ಒಂದೂ ನೆನಪಿಗೆ ಬರದೆ
ನೆನಪುಗಳು ಮಂಡಿಯೂರಿ
ಇಂದೇ ಮುಷ್ಕರ ಹೂಡಬೇಕಿತ್ತೆ ;
ಎಲ್ಲವೂ... ಗೊಜಲು ಗೊಜಲು
ಏನೆಂದು ನನ್ನವಳ ಕೇಳಲಿ ?
ಕೇಳಲೂ ಏಕೋ ಸಂಕೋಚ
ನನ್ನೊಳಗಿನ ಭಯಕೆ ಹೆದರಿ
ಗೊಂದಲದಲ್ಲಿದ್ದ ನನ್ನೆಡೆಗೆ ಒಮ್ಮೆ ನೋಡಿ
ಕಣ್ಣು ಮಿಟುಕಿಸಿ, ಹಾಗೆ ಹೋದವಳ ಬಿಡದೆ
ಸೊಂಟ ಬಳಸಿ ಬಿಡಬೇಕಿತ್ತು
ಆಗಲಾದರು ನಿಜ ಹೇಳುತ್ತಿದ್ದಳೇನೋ...
Saturday, February 1, 2020
ಕಾವ್ಯಧಾರೆ
ನನ್ನೀ ಬರಡು ಎದೆಯೊಳಗೆ
ಅದೇಕೋ ಪ್ರತಿ ಪದಗಳಿಗೂ ಮುಷ್ಕರ
ಹಾಳಾದ್ದು ಹೊರ ಬರದೆ ಎಲ್ಲೋ.. ಅಡಗಿ
ಮಿಡುಕಾಡಿ, ತಿಣುಕಾಡಿ ಇಣುಕಿದವೇ ವಿನಃ
ಒಂದೂ ಹೊರಬರಲೇ.... ಇಲ್ಲ;
ನೀನೊಮ್ಮೆ ಬಂದು ಹೋದರೆ
ನಿನ್ನ ನೂಪುರದ
ಪ್ರತಿ ಹೆಜ್ಜೆಯ ಗೆಜ್ಜೆಯ ಸದ್ದಿಗೆ
ಭೋರ್ಗರೆಯುವ ಜಲಪಾತದ ಹಾಗೆ
ಉಕ್ಕಿ, ಧುಮ್ಮಿಕ್ಕುತ
ಅಂಕು ಡೊಂಕುಗಳ
ಒಳಸುಳಿಗಳ ಛೇದಿಸಿ, ಭೇದಿಸಿ
ನುಸುಳಿ ಬಂದಾವು
ಭಾವದೊಲುಮೆಯ ಜೊತೆಗೂಡಿ
ಕಾವ್ಯಧಾರೆ.
ಕೊರಡು
ನಿನ್ನ ನೂಪುರದ
ಪ್ರತಿ ಹೆಜ್ಜೆಯ ಸುದ್ದಿಗೆ
ಧಿಡೀರನೆ ಎಚ್ಚರಗೊಳ್ಳುವ
ನನ್ನೀ ಮನಸ್ಸು
ಒಮ್ಮೊಮ್ಮೆ ನಿರ್ಜಿವ
ಕೊರಡಿನಂತೆ
ಅಕ್ಷಯ
ಅಮ್ಮೂ....,
ನನ್ನದೇನೂ ತಪ್ಪಿಲ್ಲವೆ ?
ಅವಳದೂ ತಪ್ಪಿಲ್ಲ,
ಆಗಿದ್ದೆಲ್ಲಾ ನಿನ್ನಿಂದಲೆ
ಅಕ್ಷಯ ತೃತೀಯ ದಿನ
ನಿನಗೆ ತಾಳಿ ಕಟ್ಟಿದ್ದರಿಂದ
ಇಂದು ಅಕ್ಷತಾಳೊಂದಿಗೆ
ಬಾಳು ಅಕ್ಷಯವಾಯಿತಷ್ಟೆ !
ನೆನಪುಗಳ ತೂಗುಯ್ಯಾಲೆಯಲ್ಲಿ
ನನ್ನವಳ ಖುಷಿಗೆ
ಕಾರಣ ಏನೆಂದು ಗೊತ್ತಾಗದೆ,
ನಾನಿಲ್ಲಿ ಒದ್ದಾಡುತ್ತಿದ್ದರೆ
ಒಬ್ಬರಾದರು ಬಾಯಿ ಬಿಡಬಾರದಿತ್ತೆ
ಇಂದು ವಿಶೇಷವೇನಿರಬಹುದು ?
ಜನುಮ ದಿನ, ವಾರ್ಷಿಕೋತ್ಸವ
ಹಾಳಾದ್ದು ಒಂದೂ ನೆನಪಿಗೆ ಬರದೆ
ನೆನಪುಗಳು ಇಂದೇ ಮುಷ್ಕರ ಹೂಡಬೇಕಿತ್ತೆ ;
ಎಲ್ಲವೂ... ಗೊಜಲು ಗೊಜಲು
ಏನೆಂದು ಅವಳ ಕೇಳಲಿ ?
ಕೇಳಲೂ ಏಕೋ ಸಂಕೋಚ
ನನ್ನೊಳಗಿನ ಭಯಕೆ ಹೆದರಿ
ಗೊಂದಲದಲ್ಲಿದ್ದ ನನ್ನೆಡೆಗೆ ಒಮ್ಮೆ ನೋಡಿ
ಕಣ್ಣು ಮಿಟುಕಿಸಿ, ಹಾಗೆ ಹೋದವಳ ಬಿಡದೆ
ಸೊಂಟ ಬಳಸಿ ಬಿಡಬೇಕಿತ್ತು
ಆಗಲಾದರು ನಿಜ ಹೇಳುತ್ತಿದ್ದಳೇನೋ...
ಕಾರುಬಾರು
ಆಗಾಗ ನನ್ನವಳ ಜೊತೆ
ಬೇಕೆಂದೇ ನಾ ಜಗಳ ತೆಗೆಯುತ್ತೇನೆ
ಮುನಿದು ತವರಿಗೆ ಹೋಗಲಿ ಎಂದು.
ತವರಿಗೆ ಹೋಗುವುದೆಂದರೆ
ಅವಳಿಗೂ ಅಷ್ಟಕಷ್ಟೆ
ಇಷ್ಟವಿಲ್ಲದಿದ್ದರೂ
ಅನುಮಾನಿಸುತ್ತಲೇ ಹೋದವಳ
ಬೆನ್ನಿಗೆ ಬಾಗಿಲು ಬಡಿದು,
ಒಂದೊಂದೇ ಗುಟುಕು ಗುಟುಕರಿಸಿ
ಉಪ್ಪಿನಕಾಯಿ ಚಪ್ಪರಿಸುವಾಗ
ಪಕ್ಕದಮನೆ ಪದ್ಮಳ ಗೆಜ್ಜೆಯ ನೂಪುರಕೆ
ಮೈಮನ ಪೂರಾ ಅಸ್ತವ್ಯಸ್ತ.
Newer Posts
Older Posts
Home
Subscribe to:
Posts (Atom)